ಎಲೆ ಮರೆಯ ಬಾಲಕನ ಅಸಾಧಾರಣ ಯಕ್ಷ ಕೈ ಚಳಕ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಭಾನುವಾರ, ಮಾರ್ಚ್ 29 , 2015
|
ಭಾಗವತರ ಸುಶ್ರಾವ್ಯ ಗಾಯನ, ಚೆಂಡೆ ಮದ್ದಳೆಗಳ ಸುಮಧುರ ವಾದನ. ಝಗಮಗಿಸುವ ರಂಗಸ್ಥಳದಲ್ಲಿ ವಿವಿಧ ರಸರಾಗಗಳ ಸನ್ನಿವೇಷಗಳ ಆವರ್ತನ, ಸುರ, ಮರ್ತ್ಯ, ಪಾತಾಳ ಲೋಕಗಳ ದೃಶ್ಯ ಸಾಕ್ಷಾತ್ಕಾರ. ಹಾಂ ಇದು ಯಾವುದೋ ವೃತ್ತಿಪರ ಮೇಳದ ರಂಗಸ್ಥಳವೆಂದು ಭಾವಿಸಿದರೆ ನಿಮ್ಮ ಊಹೆ ತಪ್ಪಾದೀತು. ಈ ಪರಿಯ ರಂಗ ವೈಭವ ಸಾಕಾರಗೊಂಡಿದ್ದು ಬಾಲಕಲಾವಿದನೊಬ್ಬನ ಕೈಚಳಕದಲ್ಲಿ. ಈ ಕಾರ್ಟೂನ್ ರಂಗಸ್ಥಳದ ರೂವಾರಿ ಶಿವಮೊಗ್ಗ ಜಿಲ್ಲೆಯ ಯಡೂರಿನ ಬಾಲಕ ನವೀನ ಆಚಾರ್ಯನಿಂದ.
ಈ ಕೆಳಗಿನ ಚಿತ್ರಗಳನ್ನು ಗಮನಿಸಿ. ಇವೆಲ್ಲ ಬಾಲಕನ ಕೈಚಳಕದಿಂದ ಮೂಡಿಬಂದ ಅದ್ಬುತಗಳು. ಯಡೂರಿನ ನರಸಿಂಹ ಅಚಾರ್ಯ ಮತ್ತು ವಸುಮತಿಯವರ ಪುತ್ರನಾದ ನವೀನ್ ಬಾಲ್ಯದಿಂದಲೇ ಯಕ್ಷಗಾನ ಪರಿಸರದಲ್ಲಿ ಬೆಳೆದವನು. ತಂದೆಯವರ ನಿರಂತರ ಪ್ರೋತ್ಸಾಹದಿಂದ ಯಕ್ಷಗಾನ ಕಲೆಯಲ್ಲಿ ಅಭಿರುಚಿ ಬೆಳೆಸಿಕೊಂಡ ನವೀನ್ ತಮ್ಮದೇ ಕಲ್ಪನೆಯ ರಂಗಸ್ಥಳದ ನಿರ್ಮಾಣಕ್ಕೆ ತೊಡಗಿದ್ದು ಎಸ್. ಎಸ್, ಎಲ್. ಸಿ. ವಿಧ್ಯಾಭ್ಯಾಸ ಮಾಡುತ್ತಿರುವಾಗಲೆ. ಪ್ರಾರಂಭದಲ್ಲಿ ಸರಳ ಮತ್ತು ಹಿಮ್ಮೇಳ ಕಲಾವಿದರುಗಳ ಚಿತ್ರಗಳನ್ನು ರಚಿಸಿ ಯಕ್ಷಗಾನದ ದ್ವನಿಮುದ್ರಿಕೆಗಳನ್ನು ಬಳಸಿ ಯಕ್ಷಲೋಕ ನಿರ್ಮಾಣ ಮಾಡುತಿದ್ದರು. ಕ್ರಮೇಣ ತಮ್ಮ ಕಲೆಯನ್ನು ಅಭಿವೃದ್ದಿ ಪಡಿಸುತ್ತಾ ಬಂದ ಇವರು ಪ್ರಸ್ತುತ ಸುಮಾರು ಎರಡುವರೆ ಅಡಿ ಉದ್ದ, ಎರಡು ಅಡಿ ಅಗಲ ಹಾಗು ಎರಡುವರೆ ಅಡಿ ಎತ್ತರದ ಭವ್ಯ ರಂಗಸ್ಥಳವನ್ನು ನಿರ್ಮಿಸಿದ್ದಾರೆ.
ಯಾವುದೇ ಮೇಳದ ರಂಗಸ್ಥಳಕ್ಕೆ ಕಡಿಮೆಯಿಲ್ಲದಂತೆ ನಿರ್ಮಿಸಿರುವ ಈ ರಂಗಸ್ಥಳದಲ್ಲಿ ರಟ್ಟಿನಿಂದ ಭಾಗವತರು ಮದ್ದಳೆಗಾರರು, ಚೆಂಡೆವಾದಕರ ಪ್ರತಿಕೃತಿಗಳು, ಚೆಂಡೆ ಮದ್ದಳೆಗಳ ಮಾದರಿ ರಚಿಸಿ ಜೋಡಿಸಿದ್ದಾರೆ. ಯಕ್ಷಗಾನದ ದ್ವನಿಮುದ್ರಿಕೆಯ ಹಿನ್ನಲೆ ದ್ವನಿಗೆ ಅನುಸಾರವಾಗಿ ಸೂತ್ರದ ಸಹಾಯದಿಂದ ಏಕಕಾಲಕ್ಕೆ ಭಾಗವತರು, ಚೆಂಡೆ, ಮದ್ದಳೆವಾದಕರು ಕಾರ್ಯನಿರತವಾಗುವಂತೆ ಮಾಡಿರುವುದು ನವೀನ್ ಅವರ ಕಲಾಸೃಷ್ಟಿ, ಹಾಗು ಕೈಚಳಕಕ್ಕೆ ಒಂದು ಸಾಕ್ಷಿ. ಹಗ್ಗವನ್ನೆಳೆದಾಗ ಮೇಲೇರುವ ಮುಖ್ಯ ಪರದೆ ರಂಗಸ್ಥಳದ ಇನ್ನೊಂದು ಆಕರ್ಷಣೆ. ಇವಲ್ಲದೆ ಥರ್ಮೋಕಾಲ್ ನಿಂದ ಕಿರೀಟ, ಕೇದಗೆ ಮುಂದಲೆ, ಮುಂಡಾಸು, ಭುಜಕೀರ್ತಿ, ಎದೆಕಟ್ಟು, ವಡ್ಯಾಣ, ಇತ್ಯಾದಿಗಳ ಮಾದರಿಗಳಿವೆ. ಪ್ರಸಿದ್ದ ಹಿರಿಯ ಕಲಾವಿದರನೇಕರು ಇವರ ಮನೆಗೆ ಭೇಟಿಕೊಟ್ಟು ಇವರನ್ನು ಪ್ರೋತ್ಸಾಹಿಸಿದ್ದಾರೆ. ಎಲೆ ಮರೆಯ ಕಾಯಿಯಂತೆ ಘಟ್ಟದ ಮೇಲಿನ ಈ ಗ್ರಾಮೀಣ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಕಲಾಪ್ರೇಮಿಗಳೆಲ್ಲರ ಕರ್ತವ್ಯವೇ ಆಗಿದೆ.
*****************************
|
|
|